Header Ads

ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು-ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಧ್ಯೆ ಒಡಂಬಡಿಕೆ



ಮೂಡುಬಿದಿರೆ: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ನಡುವೆ ತಾಂತ್ರಿಕ ಒಡಂಬಡಿಕೆಗೆ ನಡೆದಿದೆ. ಒಡಂಬಡಿಕೆ ಪ್ರಕಾರ ಗೋವಾ-ಕರ್ನಾಟಕ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕುಂದಾಪುರದಿಂದ ಮುರ್ಡೇಶ್ವರದವರೆಗೆ 73 ಕಿ,ಮೀ ಉದ್ದದ ಹೆದ್ದಾರಿಯ ದತ್ತು ಸ್ವೀಕಾರ ಮತ್ತು ಮಂಗಳೂರು ನಗರ ಹೊರವಲಯದ ಮುಲ್ಕಿ, ಕಿನ್ನಿಗೋಳಿ, ಮೂರುಕಾವೇರಿ, ಬಜಪೆ, ಕೈಕಂಬ, ಪೊಳಲಿ, ಕಲ್ಪನೆ, ಬಿ.ಸಿ ರೋಡು ಪಾಣೆಮಂಗಳೂರು ಹಾಗೂ ತೊಕ್ಕೊಟ್ಟು ಸೇರಿಕೊಂಡು ಸಿಟಿ ಬೈಪಾಸ್ ಯೋಜನೆ ಒಡಂಬಡಿಕೆಯಲ್ಲಿ ಒಳಗೊಂಡಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸಾರಿಗೆ ಹಾಗೂ ಹೆದ್ದಾರಿ ವಿಷಯವಾಗಿ ಇತ್ತೀಚಿನ ತಾಂತ್ರಿಕ ಬೆಳವಣಿಗೆಗಳನ್ನು ತಿಳಿಯಲು ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರುಗಳಿಗೆ ಅವಕಾಶ ಸಿಗಲಿದೆ. ದತ್ತು ಪಡೆದ ಹೆದ್ದಾರಿ ಉದ್ದಗಲಕ್ಕೂ ಕಾಲಕಾಲಕ್ಕೆ ತಾಂತ್ರಿಕ ಅಧ್ಯಯನ ನಡೆಸಿ ಹೆದ್ದಾರಿ ಬೆಳವಣಿಗೆ ಬಗ್ಗೆ ಹೆದ್ದಾರಿ ಇಲಾಖೆಗೆ ಸೂಕ್ತ ಸಲಹೆ ನೀಡಲಾಗುವುದು. ಹೆದ್ದಾರಿ ಕಾಮಗಾರಿಗಳನ್ನು ಶೈಕ್ಷಣಿಕ ಭೇಟಿಯ ಮೂಲಕ ಪ್ರಾಯೋಗಿಕವಾಗಿ ಕಲಿಯಲು ಅವಕಾಶ ಜತೆಗೆ ವಿದ್ಯಾರ್ಥಿಗಳಿಗೆ ಶಿಷ್ಯಭತ್ಯೆ ಸಹಿತ ಇಂಟರ್ನ್ಶಿಪ್, ಆಳ್ವಾಸ್‌ನಲ್ಲಿ ಸುಸಜ್ಜಿತ ಸಂಶೋಧನಾಧಾರಿತ ಪ್ರಯೋಗಾಲಯದ ನಿರ್ಮಾಣ, ಹೆದ್ದಾರಿ ಕಾಮಗಾರಿಗೆ ಸಂಬಂಧಪಟ್ಟ ಗುತ್ತಿಗೆದಾರರು ಹಾಗೂ ಕಂಪೆನಿಯ ಎಂಜಿನಿಯರ್‌ಗಳೊಂದಿಗೆ ಭೇಟಿ, ತಾಂತ್ರಿಕ ವಿಷಯಗಳ ವಿನಿಮಯ ಮತ್ತು ವ್ಯತ್ತಿಪರ ಸಂಬಂಧಗಳನ್ನು ಬೆಳೆಸಲು ಈ ಒಡಂಬಡಿಕೆ ನೆರವಾಗಲಿದೆ ಎಂದರು.
ಆಳ್ವಾಸ್ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡೀಸ್, ವಿಭಾಗ ಮುಖ್ಯಸ್ಥ ಅಜಿತ್ ಹೆಬ್ಬಾರ್, ಪ್ರೊ.ವರದರಾಜ್ ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.